Friday, January 15, 2010

ದುರಂತ

ನಾವೆಲ್ಲರೂ ಕಂಡ ಹಾಗೆ
ರೊಟ್ಟಿ ಮಾಡುವದರಲಿ ಒಂದೇ ಬಗೆ.
ನೀರು ಹನಿಸಿ ಹಿಟ್ಟಿಗೆ,
ಕಲೆಸಿ ನಾದುವರು ಮೆತ್ತಗೆ.
ಕಣ ಕಣಗಳೂ ಬೆರೆವ ಹಾಗೆ,
ಬಿಡಿಸಲಾರದ ನಂಟಿನ ಬೆಸುಗೆ.
ಕಟ್ಟಿದ ಉಂಡೆಯನು ಮೆಲ್ಲಗೆ,
ತಟ್ಟಲಿ ಅಂಗೈಗಳ ನಡುವೆ,
ಲಟ್ಟಿಸಲಿ  ಮಣೆಗಳ ಮೇಲೆ,
ಒಡ್ಡಲಿ ಅಗ್ನಿಪರೀಕ್ಷೆಗೆ,
ರೊಟ್ಟಿ ಮಾತ್ರ ಗುಂಡಗೆ.

ಆದರೆ,
ರೊಟ್ಟಿ ಬಿದ್ದರೆ ಕಂಗಳಿಗೆ
ಬಗೆ ಬಗೆಯಲಿ ಬಗೆವಾಸೆ ಎಲ್ಲರಿಗೆ.
ಹಿತವಾಗಿ ಬಳುಕುವಾಗ,
ಒಣಗಿ ರಟ್ಟಿನಂತಿರುವಾಗ,
ಮುರಿಮುರಿದು ನಾಲ್ಕಾರುಬಾರಿ,
ಪದರು ಪದರಾಗಿ ಹೇಗೆ ಬೇಕೋ ಹಾಗೆ,
ಕೆಂಪು ಮೆಣಸಿನ ಪುಡಿ,
ತರಹೇವಾರಿ ಮಸಾಲೆ ಪಲ್ಲೆ,
ಇಂಥ ವ್ಯಂಜನಗಳ ಜೊತೆಗೆ,
ಹಲ್ಲುಗಳ ಮಿಲ್ಲಿನಲಿ,
ನುಣ್ಣಗೆ ಅರೆದು,
ಹಿಂಡಿದ ರಸ ಹೀರಿ,
ನುಂಗಿ ನೀರು ಕುಡಿಯುತ್ತಾರೆ - 
ಈ ರೊಟ್ಟಿ ಆಕ್ರಂದನ ಮಾಡದ ಹಾಗೆ,
ಮತ್ತೆ ಉಸಿರೆತ್ತದ ಹಾಗೆ.



ಟಿಪ್ಪಣಿ:
ಈ ಬ್ಲಾಗಿನಲ್ಲಿಯ ಮೊದಲನೆಯ ಕವನ "ಬೇಡ ಕೃಷ್ಣಾ ರಂಗಿನಾಟ" ಕುರಿತು ಒಂದು ಚಿಕ್ಕ ವಿವರಣೆ ನೀಡುವುದು ಸಮಂಜಸವೆಂದು ಅನಿಸಿದೆ. ಇಲ್ಲಿ, ೭೮೬- ಒಂದು ಸಮುದಾಯವನ್ನು ಪ್ರತಿನಿಧಿಸಿದರೆ (ಮುಸ್ಲಿಂ ಸಮುದಾಯ), ರಾಧೆ ಇನ್ನೊಂದು ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಒಟ್ಟಾರೆಯಾಗಿ ಈ ಕವನ, ಸಮಾಜದ ಸಾಮರಸ್ಯ ಹದಗೆಡುತ್ತಿರುವುದನ್ನು ಬಿಂಬಿಸುತ್ತದೆಯೆಂದು ಅಂದುಕೊಂಡಿದ್ದೇನೆ. ವಿವರಣೆಯನ್ನು ತಡವಾಗಿ ನೀಡುತ್ತಿರುವುದಕ್ಕೆ ಕ್ಷಮೆ ಇರಲಿ.

16 comments:

Subrahmanya said...

ಹ್ಹ..ಹ್ಹ..ಹ್ಹ....ರೊಟ್ಟಿ ಜಾರಿ ತುಪ್ಪಕ್ಕೆ ಬಿಳೋದೊಂದೆ ಬಾಕಿ...."ಹಲ್ಲುಗಳ ಮಿಲ್ಲಿನಲಿ..ನುಣ್ಣಗೆ ಅರೆದು..." simple and superb

ಚುಕ್ಕಿಚಿತ್ತಾರ said...

ರೊಟ್ಟಿಯ ದುರ೦ತಕ್ಕೆ ನಾವೆಲ್ಲರೂ ಕಾರಣರೆ೦ದು ಒಕ್ಕೊರಲಿನಿ೦ದ ಹೇಳಬಹುದು... ಚೆ೦ದದ ಕವಿತೆ.

ಮನಮುಕ್ತಾ said...

ಚೆ೦ದದ ಕವನ.

ಆನಂದ said...

ಪಾಪದ ರೊಟ್ಟಿಯ ದುರಂತ ಕಥೆ ಸಖತ್ತಾಗಿದೆ.

SANTA said...

bhava...... neenu kaviyaadaddendu? uttama abhivyakti. rotti kangalige kandare naligeyalli neeru baruttadeyasthe! kaige sikkare maatra rattegondisthu bala baruttade. ratteya melekelagina guttella rattaaguttade!
good to read from you.

ಶಿವರಾಮ ಭಟ್ said...

ಚಪಾತಿಯೋ, ರೊಟ್ಟಿಯನ್ನೋ ಮಾಡುವಾಗ ಮಾವ ಪಕ್ಕದಲ್ಲಿದ್ದರೆ "ದುರಂತ"ವಾಗುವುದು!!.
ಶಿವರಾಮ

sunaath said...

ರುಚಿಯಾದ ರೊಟ್ಟಿಯನ್ನಿ ತಿಂದಷ್ಟೇ ಖುಶಿಯಾಯಿತು, ನಿಮ್ಮ ಕವನವನ್ನು ಓದಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಒಟ್ಟಿನಲ್ಲಿ ನಾವು ಕಾಣುವುದೊ೦ದು,ಅನುಭವಿಸುವುದೊ೦ದು.ಅಲ್ಲವೇ?
ಚೆನ್ನಾಗಿದೆ ಕವನ.

Narayan Bhat said...

ಸುಬ್ರಹ್ಮಣ್ಯ ಭಟ್ ಅವರೆ,

ನೀವು ಕವನ ಮೆಚ್ಚಿದ ತಕ್ಷಣ ನನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಿದೆ! ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆ.

Narayan Bhat said...

ಚುಕ್ಕಿ ಚಿತ್ತಾರ ಅವರೆ,
ರೊಟ್ಟಿಯ ದುರಂತದಲ್ಲಿ ನೀವೂ ಸಹಭಾಗಿಗಳು ಅಂದಮೇಲೆ, ನನಗೆ ತುಂಬಾ ಸಮಾಧಾನ, ಸಾಂತ್ವನ ಸಿಕ್ಕಿದೆ.

Narayan Bhat said...

ಮನ ಮುಕ್ತಾ ಅವರೆ,
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆ.

Narayan Bhat said...

ಆನಂದ ಅವರೆ,
ರೊಟ್ಟಿಯ ಕಥೆ ಸಖತ್ತಾಗಿದೆ ಅಂತ ಬೆನ್ನು ತಟ್ಟಿದ್ದಕ್ಕೆ ಕೃತಜ್ಞತೆ.

Narayan Bhat said...

ಆತ್ಮೀಯ ವಸಂತ್,
ಇಷ್ಟು ದಿನ ಎಲ್ಲಿದ್ದೆ ಮಾರಾಯ...ನಿನ್ನ ಪ್ರತಿಕ್ರಿಯೆ ನೋಡಿ ನನಗಂತೂ ರಾಶಿ ಖುಷಿ ಆತು.

Narayan Bhat said...

ಅನನ್ಯಾನ್ವಿತದ ಶಿವಣ್ಣ,
ಭಕ್ಷಿಸಲು ಯೋಗ್ಯವಾದ ಯಾವುದು ಕೈಗೆ ಸಿಕ್ಕರೂ ದುರಂತವೇ!

Narayan Bhat said...

ಸುನಾಥ್ ಅವರೆ,
ನಿಮ್ಮ ಮೆಚ್ಚುಗೆ ನನಗೆ ಹೆಚ್ಚಿನ ಖುಷಿ ನೀಡಿತು.

Narayan Bhat said...

ಶೋಧನೆಯ ಕು.ಸು.ಮುಲಿಯಾಳ ಅವರೆ,
ನೀವು ಹೇಳೋದು ನಿಜ. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆ.